ಡಿ ವಿ ಗುಂಡಪ್ಪ ಜೀವನ ಚರಿತ್ರೆ ಕನ್ನಡ – D V Gundappa Biography in Kannada

ಹಲೋ ವಿದ್ಯಾರ್ಥಿಗಳೇ, ನಾವು ಇಲ್ಲಿ ಬರೆದಿದ್ದೇವೆ D V Gundappa Biography in Kannada ಈ ಪ್ರಬಂಧವು ವಿದ್ಯಾರ್ಥಿಯ ಪರೀಕ್ಷೆಯಲ್ಲಿ ತುಂಬಾ ಸಹಾಯಕವಾಗುತ್ತದೆ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಈ ಪ್ರಬಂಧವನ್ನು ಸಿದ್ಧಪಡಿಸಲಾಗಿದೆ.

ಡಿ ವಿ ಗುಂಡಪ್ಪ ಜೀವನ ಚರಿತ್ರೆ ಕನ್ನಡ – D V Gundappa Biography in Kannada Language

ಜನನ 1888ರಲ್ಲಿ ಕೋಲಾರ ಜಿಲ್ಲೆ ಮುಳಬಾಗಲಿನಲ್ಲಿ ತಂದೆ ದೇವನಹಳ್ಳಿ ವೆಂಕಟರಮಣಯ್ಯ ಶಿಕ್ಷಕರಾಗಿದ್ದರು. ಡಿ.ವಿ.ಜಿ. ಎಂದೇ ಖ್ಯಾತನಾಮರಾದ ಗುಂಡಪ್ಪನವರು ಸ್ವಪ್ರಯತ್ನದಿಂದ ಸಂಸ್ಕೃತ, ಕನ್ನಡ, ಇಂಗ್ಲಿಷ್ ಭಾಷೆಗಳಲ್ಲಿ ಅಸಾಧಾರಣ ಪಾಂಡಿತ್ಯವನ್ನು ಪಡೆದರು. ತೆಲುಗು, ತಮಿಳು ಭಾಷಾ ಜ್ಞಾನವನ್ನೂ ಬೆಳೆಸಿಕೊಂಡರು. ಪತ್ರಿಕಾ ಕ್ಷೇತ್ರದಿಂದ ತಮ್ಮ ಜೀವನವನ್ನು ಆರಂಭಿಸಿದ ಇವರು 1907 ರಲ್ಲಿ ಸ್ವತಃ ‘ಭಾರತಿ’ ಎಂಬ ಕನ್ನಡ ದಿನಪತ್ರಿಕೆಯನ್ನು ಪ್ರಾರಂಭಿಸಿದರು. ಬೇರೆ ಬೇರೆ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದರು. ಅನಂತರ ‘ಕರ್ನಾಟಕ’ ಎಂಬ ಇಂಗ್ಲಿಷ್ ವಾರಾರ್ಧ ಪತ್ರಿಕೆಯನ್ನು ಸ್ಥಾಪಿಸಿದರು.

1928ರಲ್ಲಿ ಬಾಗಲಕೋಟೆಯಲ್ಲಿ ನಡೆದ ಕರ್ನಾಟಕ ವೃತ್ತ ಪತ್ರಿಕಾಕರ್ತರ ಪ್ರಥಮ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಸಾಹಿತ್ಯ, ರಾಜಕೀಯ ಮತ್ತು ಸಾಮಾಜಿಕ ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಸುಮಾರು ಏಳು ದಶಕಗಳಷ್ಟು ದೀರ್ಘಕಾಲ ಡಿ.ವಿ.ಜಿ.ಯವರು ಮಾಡಿದ ಸೇವೆ ಮಹತ್ತರವಾದದ್ದು. ಪಾಂಡಿತ್ಯ, ಸಹೃದಯತ, ದಾರ್ಶನಿಕತೆ, ಲೌಕಿಕಾಸಕ್ತಿ, ವೈಚಾರಿಕತ, ಪರಂಪರಾಶ್ರದ್ದೆ, ಪ್ರತಿಭೆ, ಪರಿಶ್ರಮ ಇವು ಡಿ.ವಿ.ಜಿಯವರ ಯಶಸ್ಸಿನ ಗುಟ್ಟು, ಸಮಾಜಸೇವೆ, ರಾಜಕೀಯ ಚರ್ಚೆಗಳಲ್ಲಿಯೂ, ಪತ್ರಿಕೋದ್ಯಮದಲ್ಲಿಯೂ ಅವರು ಮಾಡಿದ ಪರಿಶ್ರಮ ಅವರ ಸಾಹಿತ್ಯಕ ಪರಿಶ್ರಮಕ್ಕಿಂತ ಮಿಗಿಲಾದದ್ದು.

ಸಾಮಾಜಿಕ ಜೀವನ, ಸಾಹಿತ್ಯಕೃಷಿ ಹೇಗೆ ಒಂದಕ್ಕೊಂದು ಪೂರಕವಾಗಿದ್ದವೋ ಹಾಗೆಯೇ ಶಾಸ್ತಪಾಂಡಿತ್ಯ, ಕಾವ್ಯರಸಿಕತೆಗಳೂ ಅವರಲ್ಲಿ ಅಭಿನ್ನವಾಗಿ ಮನಮಾಡಿಕೊಂಡಿದ್ದವು. ಡಿ.ವಿ.ಜಿ.ಯವರ ಉಪನ್ಯಾಸ ಸಂಗ್ರಹಗಳಾದ ‘ಜೀವನ-ಸೌಂದರ್ಯ ಮತ್ತು ಸಾಹಿತ್ಯ’ (1932) ‘ಸಾಹಿತ್ಯ ಶಕ್ತಿ’ (1950) ಮತ್ತು ‘ಕಾವ್ಯ ಸ್ವಾರಸ್ಯ’ (1975) ಕೃತಿಗಳಲ್ಲಿ ರಾಷ್ಟ್ರೀಯತೆ – ಸಾಹಿತ್ಯ ಕಾರ್ಯಗಳು ಅವರಲ್ಲಿ ಸಮನ್ವಿತವಾಗಿರುವುದನ್ನು ಕಾಣಬಹುದು.

ದೀರ್ಘಕಾಲ ಶಾಸನ ಪರಿಷತ್ತಿನ ಸದಸ್ಯರಾಗಿ (1927-40) ಪೌರಸಭಾ ಸದಸ್ಯರಾಗಿ, ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ (1927-43) ಮೈಸೂರು ರಾಜ್ಯ ನಿಬಂಧನ ಸುಧಾರಣೆ ಸಮಿತಿ ಮತ್ತಿತರ ತಜ್ಞ ಸಮಿತಿಗಳಲ್ಲಿ ಡಿ.ವಿ.ಜಿ. ಸಲ್ಲಿಸಿದ ಸೇವೆ ನೆನಪಿನಲ್ಲಿರುವಂಥದು. ಪತ್ರಿಕಾ ಕ್ಷೇತ್ರದ ಅವರ ಜೀವನಾನುಭವಗಳನ್ನು ಅವರ ವೃತ್ತಪತ್ರಿಕೆ’ ಗ್ರಂಥದಲ್ಲಿ ನೋಡಬಹುದು. ಸರ್ ಕೆ. ಶೇಷಾದ್ರಿ ಅಯ್ಯರ್ (1916) ಶಿವಾಭಿನವ ನೃಸಿಂಹಭಾರತಿ ಸ್ವಾಮಿಗಳು (1917) ಟಾಲ್‌ಸ್ಟಾಯ್ (1917) ಹಿಂದೂ-ಧಾರ್ಮಿಕ ಸಂಸ್ಥೆಗಳ ಸುಧಾರಣೆ (1923) ಇಂಥ ಹಲವು ಕಿರುಹೊತ್ತಿಗೆಗಳು ಸಮಕಾಲೀನ ಇತಿಹಾಸ ಬರೆಯುವವರಿಗೆ ಉಪಯುಕ್ತ ಸಾಮಗ್ರಿ ಕೊಡುವಂಥವು. ರಾಜ್ಯಾಂಗತತ್ವಗಳು (1954) ರಾಜಕೀಯ ಪ್ರಸಂಗಗಳು (1958) ಸಾರ್ವಜನಿಕ ಜೀವನದಲ್ಲಿರುವವರಿಗೆ ಅಧ್ಯಯನ ಯೋಗ್ಯವಾದ ಅಮೂಲ್ಯಗ್ರಂಥಗಳು.

ಡಿ.ವಿ.ಜಿ.ಯವರು ದೇಶೀಯ ಸಮಸ್ಯೆಗಳನ್ನು ಕುರಿತು ಅಧಿಕಾರಯುತವಾಗಿ ಮಾತಾಡಬಲ್ಲವರಾಗಿದ್ದರು. ಡಿ.ವಿ.ಜಿ.ಯವರು ತಮ್ಮಧೇಯ ಪ್ರವರ್ತನೆಗಾಗಿ ಅನೇಕ ಸಂಘಸಂಸ್ಥೆಗಳನ್ನು ಕಟ್ಟಿ ಬೆಳೆಸಿದರು. ‘ಸೋಷಿಯಲ್ ಸರ್ವಿಸ್ ಲೀಗ್’, ‘ಪಾಪ್ಯುಲರ್ ಎಜುಕೇಷನ್ ಲೀಗ್’ ಹುಟ್ಟುಹಾಕಿದರು. ‘ಗೋಖಲೆ ಸಾರ್ವಜನಿಕ ವಿಚಾರಸಂಸ್ಥೆ ಸಾರ್ವಜನಿಕ ಸಮಸ್ಯೆಗಳ ಅಧ್ಯಯನಕ್ಕೆ ರಾಷ್ಟ್ರಕ್ಕೆ ಉತ್ತಮ ಪ್ರಜೆಗಳಾಗಲು ಶಿಕ್ಷಣ ನೀಡುವುದಕ್ಕೆ ಇಂದಿಗೂ ಕೆಲಸ ಮಾಡುತ್ತಿದೆ. ಕರ್ನಾಟಕ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ ಅದರ ಕಾರ್ಯವಿಸ್ತರಣೆಗಾಗಿ ದುಡಿದಿದ್ದಾರೆ.

ಅವರು ಬರೆದಿರುವ ಜೀವನಚರಿತೆಗಳು, ದಿವಾನ್ ರಂಗಾಚಾರ್ಲು, ಗೋಪಾಲಕೃಷ್ಣ ಗೋಖಲೆ ಮತ್ತು ವಿದ್ಯಾರಣ್ಯರು ಅಪರೂಪದವು ಎನಿಸುವಂಥವು. ತತ್ವಚಿಂತನೆ, ರಾಜ್ಯ ವಿಷಯಕ ಪ್ರಸಂಗಗಳು, ಕಾವ್ಯ, ಪ್ರಬಂಧ, ನಾಟಕ, ಸಂಸ್ಕೃತಿ ದರ್ಶನ, ಜೀವನಚರಿತ್ರ, ದಾರ್ಶನಿಕ ಜಿಜ್ಞಾಸೆ, ಆಧ್ಯಾತ್ಮಪ್ರತಿಪಾದನೆ ಹೀಗೆ ಹಲವಾರು ಸಾಹಿತ್ಯ ಕೃತಿಗಳನ್ನು ಡಿ.ವಿ.ಜಿ. ಕನ್ನಡನಾಡಿಗೆ ನೀಡಿದ್ದಾರೆ.

ವಸಂತ ಕುಸುಮಾಂಜಲಿ, ನಿವೇದನ ಇವು ಅವರ ಕವಿತಾ ಶಕ್ತಿಗೆ ನಿದರ್ಶನಗಳಾಗಿವೆ. ಜೀವನ ಸೌಂದರ್ಯ ಮತ್ತು ಸಾಹಿತ್ಯ, ಸಾಹಿತ್ಯಶಕ್ತಿ, ಬಾಳಿಗೊಂದು ನಂಬಿಕೆ, ಸಂಸ್ಕೃತಿ ಇವರ ಸಾಹಿತ್ಯ ವಿಮರ್ಶಾಗ್ರಂಥಗಳು, ಉಮರನ ಒಸಗೆ, ಮ್ಯಾಕ್ಬೆತ್ ಅನುವಾದಗಳು, ಶ್ರೀರಾಮ ಪರೀಕ್ಷಣ, ಅಂತಃಪುರಗೀತೆ, ಗೀತಾಶಾಕುಂತಲ, ಮಂಕುತಿಮ್ಮನ ಕಗ್ಗ, ಮರುಳ ಮುನಿಯನ ಕಗ್ಗ, ನಾಟಕ ಹಾಗೂ ಪದ್ಯಕಾವ್ಯಗಳು, ಜ್ಞಾಪಕ ಚಿತ್ರಶಾಲೆಯ 8 ಸಂಪುಟಗಳು ಅವರ ಸಮಕಾಲೀನ ಪರಿಚಯದ ಉತ್ಕೃಷ್ಟ ಗ್ರಂಥಗಳು, ರಾಜ್ಯಶಾಸ್ತ್ರ, ರಾಜ್ಯಾಂಗದ ತತ್ವಗಳು ಇವು ಶಾಸ್ತ್ರಗ್ರಂಥಗಳು. ಅವರ ‘ಶ್ರೀಮದ್ಭಗವದ್ಗೀತಾ ತಾತ್ಪರ್ಯ’ ಅಥವಾ ‘ಜೀವನ ಧರ್ಮಯೋಗ’ ಎಂಬ ಉಪನ್ಯಾಸ ಗ್ರಂಥಕ್ಕೆ 1967ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ‘ದೇವರು’, ‘ಕಾವ್ಯಸ್ವಾರಸ್ಯ’ ಇವು ಇವರ ಕೊನೆಯ ಕಾಲದ ಕೃತಿಗಳು.

ಲಲಿತಕಲೆಗಳಲ್ಲಿ ಡಿ.ವಿ.ಜಿಯವರ ಆಸಕ್ತಿ ಹಿರಿದಾದದ್ದು. ಸಂಗೀತ ನಾಟ್ಯಾದಿಗಳಲ್ಲಿ ಅವರ ತಿಳಿವಳಿಕೆ ಅಪಾರ. ಗುಂಡಪ್ಪನವರು ಉತ್ತಮ ವಾಗಿಯೂ ಹೌದು.

ಎಲ್ಲ ಸನ್ಮಾನಗಳನ್ನೂ ದೂರವಿರಿಸಲು ಬಯಸಿದ ಡಿ.ವಿ.ಜಿ.ಯವರಿಗೆ ಸಹಜವಾಗಿಯೇ ಹಲವು ಪ್ರಶಸ್ತಿಗಳು ಬಂದವು. ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ (1961) ನಾಗರಿಕರಿಂದ ಸನ್ಮಾನ ಹಾಗೂ ನಿಧಿಸಮರ್ಪಣೆ (1970) ಭಾರತ ಸರ್ಕಾರದ ‘ಪದ್ಮಭೂಷಣ ಪ್ರಶಸ್ತಿ’ (1970) ಆದರೆ ಡಿ.ವಿ.ಜಿ.ಯವರ ಎಣಿಕೆಯಲ್ಲಿ ಅವರಿಗೆ ಸಂದ ಬಹುದೊಡ್ಡ ಪ್ರಶಸ್ತಿಯೆಂದರೆ ಜನಾದಾರಣೆ.

ಡಿ.ವಿ.ಜಿಯವರು 7-10-1972ರಂದು ಬೆಂಗಳೂರಿನಲ್ಲಿ ನಿಧನರಾದರು.

ಕೆಲವು ಇಂಗ್ಲೀಷ್ ಕೃತಿಗಳು; The problems of Indian Native States. The Government ofIndia & the Indian States, States and their people in the Indian Cosntitutions, etc.

ಈ ವಿಷಯಕ್ಕಾಗಿ ನೀವು ಕನ್ನಡದಲ್ಲಿ ಸಂಪೂರ್ಣ ಪ್ರಬಂಧವನ್ನು ಪಡೆದುಕೊಂಡಿದ್ದೀರಿ ಎಂದು ನಾನು ಭಾವಿಸುತ್ತೇನೆ. ಈ ಪ್ರಬಂಧಕ್ಕೆ ಸಂಬಂಧಿಸಿದಂತೆ ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ದಯವಿಟ್ಟು ಕೆಳಗಿನ ವಿಭಾಗಕ್ಕೆ ಕಾಮೆಂಟ್ ಮಾಡಿ ನಮ್ಮ ವಿಷಯ ಶಿಕ್ಷಕರು ನಿಮಗೆ ಉತ್ತರಿಸುತ್ತಾರೆ. ನಿಮ್ಮ ಪರೀಕ್ಷೆಯಲ್ಲಿ ನೀವು ಉತ್ತಮ ಅಂಕಗಳನ್ನು ಗಳಿಸಿದ್ದರಿಂದ ಸಂಪೂರ್ಣ ಪರಿಹಾರಗಳನ್ನು ನೀಡಲು ನಾವು ನಮ್ಮ ಅತ್ಯುತ್ತಮ ಪ್ರಯತ್ನ ಮಾಡಿದ್ದೇವೆ.

ಶುಭವಾಗಲಿ !!

Leave a Comment

Your email address will not be published. Required fields are marked *